ಸೆಲೆ ಬತ್ತು ಹೋಗುತ್ತಿದೆ.
ಬಾಯಾರಿಕೆ ಆರಿಲ್ಲ. ನೀರಿನ ಅವಶ್ಯಕತೆ ಜೀವಕ್ಕಿದೆ,ಮನಸ್ಸಿಗೂ..
ದೇಹ ಆರೋಗ್ಯವಿದ್ರೆ
ಮನಸ್ಸಿಗೂ ನೆಮ್ಮದಿ ಅಲ್ವಾ..ಮನಸ್ಸು ಹದಗೆಟ್ಟರೆ ದೇಹ ಪರಿತಪಿಸುತ್ತೆ. ಎಲ್ಲವು ಕ್ರಿಯೆಯೊಳಗೆ ಸಿಕ್ಕಿ
ಹಾಕಿಕೊಂಡಿದೆ.
ನೀರಿನ ಸೆಲೆ ಮರೆಯಾಗುತ್ತಿರೋದನ್ನ
ಕಂಡು ದೇಹ ಮನಸ್ಸು ಎರಡಕ್ಕೂ ಕಸಿವಿಸಿ. ಇಷ್ಟು ದಿನ ಆಧಾರವಾಗಿದ್ದು ಇಂದು ಕಾಣೆಯಾಗ್ತಿರೋದನ್ನ ಕಣ್ಣಾರೆ
ಕಂಡಾಗ ಇಂತಹ ಸಂಕಟ ಸಹಜವೇ..
ಒಂದಂತು ಸತ್ಯ.. ಇಲ್ಲದ್ದು
ಅಭ್ಯಾಸವಾದರೆ ಇದ್ದಾಗ ಕಿರಿ ಕಿರಿ ಅನ್ನಿಸೊಲ್ಲ..
ಅಲ್ಲಿ-ಇಲ್ಲಿ,ಆಗಾಗ ನೀರಿನ ಹರಿವು ಕಾಣತ್ತೆ,ಸೂರ್ಯನ ಬೆಳಕಲ್ಲಿ ಹೊಳಪ್ಪಾಗಿ,ಬಾಯಾರಿದಾಗ ಸಂಕಟ ಆರಿಸುವ ಆಧಾರವಾಗಿ,ಚಂದ್ರನ ಬೆಳಕಲ್ಲಿ ತಂಪಾಗಿ ಸ್ವಚ್ಚಂದವಾಗಿ
ಕಾಣಿಸುತ್ತೆ.
ಆದರೆ..
ಈ ಮರೀಚಿಕೆಯ ಮಾಯೆ ಗಂಟಲಿಗೆ
ಇಳಿದರೂ ದಾಹ ಇಂಗಿಸೋಲ್ಲ.. ಎದೆಯ ಉರಿ ತಣಿಸೋಲ್ಲ..
ಕಷ್ಟವಾಗತ್ತೆ ಕೆಲವು
ಸಮಯ,ಅಭ್ಯಾಸವಾದರೆ ಎಲ್ಲವೂ
ಸಹಜ. ಅಗತ್ಯವೆನಿಸಿದಾಗ ಉಪ್ಪು ನೀರು ಸಿಹಿ ಅನಿಸುತ್ತೆ..ಇನ್ನೊಮ್ಮೆ ಸಿಹಿ ನೀರು ಉದಯಿಸಿದರೂ ರುಚಿಸೋಲ್ಲ.!
ಬತ್ತಿದೆ ಎಂದು ಮೇಲ್ನೋಟಕ್ಕೆ
ಅನಿಸಿದರೂ ಗುಪ್ತಗಾಮಿನಿಯಾಗಿ ಮತ್ತೆಲ್ಲೋ ಹರಿಯುತ್ತೆ..ಮರೀಚಿಕೆಯಾಗಿ ಹೊಳೆಯುತ್ತೆ..ಕಣ್ಣಿಗೆ ಕಾಣದ,ಮನಸ್ಸಿಗೆ ಅರ್ಥವಾಗದ ಹರಿವು ಇದ್ದೇ
ಇರುತ್ತದೆ ಎನ್ನೋ ನಂಬಿಕೆ.. ಅದರ ಆಧಾರದಲ್ಲೇ ಜೀವನ.. ಅದೇ ಸ್ವಾಭಾವಿಕ ಕ್ರಿಯೆ..!